Breaking News

ಬೆಳಗಾವಿಯ ನಾಲ್ವರು ಪೊಲೀಸ್ ಅಧಿಕಾರಿಗಳು ಪಡೆಯಲಿದ್ದಾರೆ ಮುಖ್ಯಮಂತ್ರಿ ಚಿನ್ನದ ಪದಕ

Spread the love

ಬೆಳಗಾವಿ :ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಪೊಲೀಸ್ ಅಧಿಕಾರಿಗಳು ಈ ಬಾರಿ ಮುಖ್ಯಮಂತ್ರಿಯವರಿಂದ ಚಿನ್ನದ ಪದಕ ಪಡೆಯಲಿದ್ದು, ಅವರಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳೆನ್ನುವುದು ವಿಶೇಷ.

ಸರ್ಕಾರ 2018 ರಿಂದ ಮುಖ್ಯಮಂತ್ರಿ ಪದಕಕ್ಕಾಗಿ ಅಧಿಕಾರಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದರೂ, ವಿವಿಧ ಕಾರಣಗಳಿಂದ ಪದಕ ಪ್ರದಾನ ಸಮಾರಂಭವನ್ನು ಮುಂದೂಡುತ್ತ ಬಂದಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಘೋಷಣೆ ಆಗಿರುವ ಅಧಿಕಾರಿಗಳಿಗೆ ಪದಕವನ್ನು ಈ ಬಾರಿ ಮಾರ್ಚ್ 23ರಂದು ಬೆಂಗಳೂರಿನಲ್ಲಿ ನೀಡಲಾಗುತ್ತಿದೆ.

 

ರಾಜ್ಯದ ಅರಣ್ಯ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೋರ್ವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಸವದತ್ತಿ ವಲಯದ ಅರಣ್ಯಾಧಿಕಾರಿ ಸುನಿತಾ ನಿಂಬರಗಿ (ನಾಗಲೋಟಿಮಠ) ಆ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ನಿಂಬರಗಿ ಅವರು ಕಾಕತಿ, ಗುಜನಾಳ ಮತ್ತು ಬೆಳಗಾವಿ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಗುಜನಾಳ ಅರಣ್ಯ ವಲಯದಲ್ಲಿ ಒತ್ತುವರಿಯಾಗಿದ್ದ ಅರಣ್ಯವನ್ನು ಬಿಡಿಸಿ ಅವರು ನಿರ್ಮಿಸಿದ ಬನ ನಿಂಬರಗಿ ಬನ ಎಂದೇ ಖ್ಯಾತಿ ಹೊಂದಿತ್ತು.

 

ಬೆಳಗಾವಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಯಶೋದಾ ವಂಟಗುಡಿ ಅವರು ದಾವಣಗೆರೆ ಜಿಲ್ಲೆಯಲ್ಲಿ 2017 ರಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ, ಅವರಿಗೆ 2018 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದರು. ಆದರೆ, ಕಾರ್ಯಕ್ರಮ ನಡೆಯದ ಕಾರಣ ಅವರು ಈ ವರ್ಷ ಪದಕ ಪಡೆಯಲಿದ್ದಾರೆ.

ಈ ವರ್ಷ ಬೆಳಗಾವಿ ಜಿಲ್ಲೆಯಿಂದ ಮುಖ್ಯಮಂತ್ರಿ ಪದಕ ಪಡೆಯಲಿರುವ ಇನ್ನೋರ್ವ ಅಧಿಕಾರಿ ಲೋಕಾಯುಕ್ತ ಸಿಪಿಐ ಸಂತೋಷ ಹಳ್ಳೂರ. ಹಳ್ಳೂರ ಅವರು ಆಗಷ್ಟ 2019 ರಿಂದ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮುಧೋಳ ಪೊಲೀಸ್ ಠಾಣೆಯಲ್ಲಿ ಮತ್ತು ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಉತ್ತಮ ಕಾರ್ಯ ಮಾಡಿರುವುದಕ್ಕೆ, 2017 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದರು.

2018 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿದ್ದ ಸದ್ಯದ ಹುಕ್ಕೇರಿ ಪಿಎಸ್ ಐ ಶಿವಾನಂದ ಗುಡಗನಟ್ಟಿ ಕೂಡ ಈ ವರ್ಷ ಬೆಳಗಾವಿ ಜಿಲ್ಲೆಯಿಂದ ಪದಕ ಪಡೆಯುವವರಲ್ಲಿ ಒಬ್ಬರಾಗಿದ್ದಾರೆ. ಈ ಮೊದಲು ಅವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಬರುವ ಮಾರ್ಚ್ 23 ರಂದು ಬೆಂಗಳೂರಿನಲ್ಲಿ ಅಧಿಕಾರಿಗಳಿಗೆ ಪದಕ ಪ್ರದಾನ ಸಮಾರಂಭ ಇಟ್ಟುಕೊಳ್ಳಲಾಗಿದ್ದರೂ, ಕೊರೊನಾ ಭೀತಿಯಿಂದ ಈ ಬಾರಿಯೂ ಕಾರ್ಯಕ್ರಮ ನಡೆಯುವುದು ಅನುಮಾನವಾಗಿದೆ.

ವರದಿ : ಮಲ್ಲು ಬೋಳನವರ


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …