Breaking News

ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಮತಯಾಚಿಸಿದ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ: ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಬಹು ಸಂಖ್ಯಾತವಾಗಿದೆ. ಮೇ ಹತ್ತರಂದು ನಡೆಯುವ ಚುನಾವಣೆಯಲ್ಲಿ ನನಗೆ ವೀರಶೈವ ಲಿಂಗಾಯತ ಸಮಾಜ ಆಶೀರ್ವಾದ ಮಾಡಬೇಕು ಎಂದು ಅರಭಾವಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ಗೋಕಾಕ ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾರ‍್ಸ್ ಸಭಾ ಭವನದಲ್ಲಿ ಸೋಮವಾರ ನಡೆದ ಅರಭಾವಿ ವಿಧಾನಸಭಾ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಬೆಂಬಲಾರ್ಥ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಇವರೇ ಯಾಕೆ ಬೇಕು ಎಂಬ ಚರ್ಚೆ ನಡೆಯುತ್ತಿದೆ. ಆದರೆ ನಾನು ಶಾಸಕನಾದರೂ ಮುಂದೆ ಒಂದು ದಿನ ನಿವೃತ್ತಿಯಾಗಲೇಬೇಕು. ಆಗ ಈ ಕ್ಷೇತ್ರಕ್ಕೆ ಯಾರನ್ನು ನಾಯಕರಾಗಿ ಆಯ್ಕೆ ಮಾಡಬೇಕು ಎಂಬ ಚರ್ಚೆಯೂ ಇದೆ. ಆ ಸಂದರ್ಭದಲ್ಲಿ ಭಗೀರಥ ಉಪ್ಪಾರ ಸಮಾಜ, ಹಾಲುಮತ ಕುರುಬ ಸಮಾಜ, ವೀರಶೈವ ಲಿಂಗಾಯತ ಸಮಾಜವೂ ಸೇರಿದಂತೆ ಎಲ್ಲ ಸಣ್ಣಪುಟ್ಟ ಸಮಾಜಗಳನ್ನು ಒಟ್ಟುಗೂಡಿಸಿ ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸೂಚಿಸುವ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡೋಣ ಎಂದು ಹೇಳಿದ್ದೇನೆ ಎಂದು ಅವರು ನುಡಿದರು.


ದೇವರ ದಯೆ ಹಾಗೂ ಕ್ಷೇತ್ರದ ಜನರ ಆಶೀರ್ವಾದದಿಂದ ಇಲ್ಲಿಯವರೆಗೆ ನಾನು ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನಾನು ಶಾಸಕನಾಗಿ ಆಯ್ಕೆ ಆದಮೇಲೆ ಎಲ್ಲ ಸಮಾಜಗಳನ್ನು ಒಂದೇ ತಕ್ಕಡಿಯಲ್ಲಿ ಸಮನಾಗಿ ತೂಗಿಕೊಂಡು ಬಂದಿದ್ದೇನೆ. ಎಲ್ಲಿಯೂ ಯಾವ ಸಮಾಜಕ್ಕೂ ನಾನು ಹೆಚ್ಚು ಕಡಿಮೆ ಮಾಡಿಲ್ಲ. ಎಲ್ಲ ಸಮಾಜಗಳನ್ನು ಸಮನಾಗಿ ಕಂಡಿದ್ದೇನೆ ಎಂದು ಹೇಳಿದರು.
ಮುಂದಿನ ದಿನಮಾನಗಳಲ್ಲಿ ಅವೆಲ್ಲ ಸೂಚಿಸುವ ವ್ಯಕ್ತಿಯನ್ನೇ ಶಾಸಕನಾಗಿ ಮಾಡೋಣ. ಎಲ್ಲ ಸಮಾಜಗಳು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳೋಣ. ಏಕೆಂದರೆ ಯಾರಿಗೂ ಟಿಕೆಟ್ ಸಿಕ್ಕರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದವರು ಕೆಳಗಡೆ ಪಕ್ಷೇತರರಾಗಿ ನಿಂತಿದ್ದಾರೆ. ಅಂತ ಪರಿಸ್ಥಿತಿ ನಮ್ಮಲ್ಲಿ ಉದ್ಭವ ಆಗೋದು ಬೇಡ. ನಾನು ಕೂಡ ಅಂತಹ ವ್ಯಕ್ತಿಯನ್ನು ಬೆಂಬಲಿಸುತ್ತೇನೆ ಎಂದರು.

ಕ್ಷೇತ್ರದ ಎಲ್ಲಾ ಜಾತೀ-ಜನಾಂಗದ ಜನರು ನನ್ನನ್ನು ತಮ್ಮ ಮನೆ ಮಗ ಎಂಬAತೆ ಪ್ರತಿ ಬಾರಿಯೂ ನನ್ನನ್ನು ಆಯ್ಕೆ ಮಾಡಿ ಕಳಿಸುತ್ತಿದ್ದಾರೆ. ನಾನು ಕೂಡ ಕ್ಷೇತ್ರದ ಜನರನ್ನು ಜಾತಿ ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡುತ್ತಾ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬರುತ್ತಿದ್ದೇನೆ. ಆ ಕಾರಣಕ್ಕಾಗಿಯೇ ಇಂದು ಎಲ್ಲರೂ ನಮ್ಮ ಎನ್‌ಎಸ್‌ಎಫ್ ಗೃಹಕಚೇರಿಗೆ ಅವರದೇ ಮನೆ ಎಂದು ಭಾವಿಸಿ ಬರುತ್ತಿದ್ದಾರೆ. ಹೀಗಾಗಿ ಅವರ ಋಣ ನನ್ನ ಮೇಲೆ ಸದಾ ಇರುತ್ತದೆ ಎಂದು ಹೇಳಿದರು.
ನಾನು ಎಂದಿಗೂ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿದವನಲ್ಲ. ಎಲ್ಲ ಜಾತಿಯವರನ್ನು ಸಮನಾಗಿ ಕಂಡವನು. ಅಭಿವೃದ್ಧಿವೊಂದೇ ನನ್ನ ಜಾತಿ. ಹೀಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟುಗೂಡಿ ಇದೊಂದು ಬಾರಿ ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಈ ಸಮುದಾಯದ ಪ್ರಮುಖ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿತು. ಪಂಚಮಸಾಲಿ ಸಮಾಜಕ್ಕೆ ೨ಡಿ ಮೀಸಲಾತಿಯನ್ನು ನಮ್ಮ ಸರಕಾರ ನೀಡಿದೆ. ವೀರಶೈವ ಲಿಂಗಾಯತ ಮತ್ತು ಪಂಚಮಸಾಲಿ ಸಮಾಜಗಳಿಗೆ ಭಾರತೀಯ ಜನತಾ ಪಾರ್ಟಿ ಇಂದಿಗೂ ನ್ಯಾಯ ಒದಗಿಸುತ್ತಾ ಬಂದಿದೆ. ಮುಂದೆಯೂ ಒದಗಿಸಲಿದೆ. ಅಲ್ಲದೆ ಪಕ್ಷ ಕೂಡ ಅವರೊಟ್ಟಿಗೆ ಇರಲಿದ್ದು ತಾವೆಲ್ಲರೂ ಈ ಬಾರಿ ನನಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡುವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ, ಜಾರಕಿಹೊಳಿ ಕುಟುಂಬದ ಒಡನಾಟವನ್ನು ಸ್ಮರಿಸಿಕೊಂಡು, ಮೊದಲಿನಿಂದಲೂ ಈ ಕುಟುಂಬವು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸೇವೆಯನ್ನು ಮಾಡುತ್ತಿತ್ತು, ದಿ. ಲಕ್ಷ್ಮಣರಾವ ಜಾರಕಿಹೊಳಿ ಅವರು ಕಲ್ಲೊಳ್ಳಿ ಹನಮಂತ ದೇವರ ಭಕ್ತರಾಗಿದ್ದರು. ನಮ್ಮ ದೇವಸ್ಥಾನವೂ ಸೇರಿದಂತೆ ಅವಿಭಜಿತ ಗೋಕಾಕ ತಾಲೂಕಿನ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ್ದರು. ಕೆಲವರು ಹೇಳುವಂತೆ ಬಾಲಚಂದ್ರ ಜಾರಕಿಹೊಳಿ ಅವರು ತಾವಾಗಿಯೇ ಈ ಕ್ಷೇತ್ರಕ್ಕೆ ಬಂದು ನಿಂತಿಲ್ಲ. ಆಗಿನ ಶಾಸಕರಾಗಿದ್ದ ವ್ಹಿ.ಎಸ್ ಕೌಜಲಗಿಯವರನ್ನು ಸೋಲಿಸುವ ಗುರಿ ನಮ್ಮದಾಗಿತ್ತು. ನಾವೆಲ್ಲರೂ ಕೂಡಿಕೊಂಡು ಸತೀಶ ಜಾರಕಿಹೊಳಿಯವರ ಮೂಲಕ ಒತ್ತಡವನ್ನು ಹಾಕಿದಾಗ ಕೊನೆಗೆ ನಮ್ಮೆಲ್ಲರ ಒತ್ತಡಕ್ಕೆ ಮಣಿದು ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿ ಕೌಜಲಗಿಯವರ ವಿರುದ್ದ ಜಯಗಳಿಸಿದರು. ಮುಂದಿನದು ಇತಿಹಾಸ. ಎಲ್ಲ ಸಮುದಾಯದ ವಿಶ್ವಾಸವನ್ನು ಗಳಿಸಿರುವ ಬಾಲಚಂದ್ರ ಜಾರಕಿಹೊಳಿ ಅವರ ಗೆಲುವಿಗೆ ಇಡೀ ನಮ್ಮ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳು ಬೆಂಬಲ ನೀಡಿವೆ. ನಮ್ಮ ಸಮುದಾಯ ಇವರಿಂದ ಸಾಕಷ್ಟು ನೆರವು ಪಡೆದಿದ್ದೇವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಕೆಲವರು ಜಾತಿ- ಜಾತಿಗಳ ಮಧ್ಯ ಜಗಳ ಹಚ್ಚುತ್ತಾ ನಮ್ಮನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬೇಡಿ. ಬಾಲಚಂದ್ರ ಜಾರಕಿಹೊಳಿಯವರು ನಮ್ಮ ಸಮಾಜಕ್ಕೆ ಹಲವು ಮಹತ್ತರ ರಾಜಕೀಯ ಸ್ಥಾನಮಾನ ನೀಡಿದ್ದಾರೆ. ನಮ್ಮ ಸಮಾಜದ ಶೇ.೯೦ ರಷ್ಟು ಮತಗಳು ಬಿಜೆಪಿಗೆ ಹಾಕಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿಕೊಂಡರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಎಲ್ಲ ಸಮಾಜಗಳಿಗೆ ಸಾಮಾಜಿಕ, ರಾಜಕೀಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟು ಜಾತ್ಯಾತೀತ ನಾಯಕರಾಗಿದ್ದಾರೆ. ನಮ್ಮ ಸಮಾಜಕ್ಕೆ ೨ಡಿ ಮೀಸಲಾತಿಯನ್ನು ಸರಕಾರದಿಂದ ಕಲ್ಪಿಸಿಕೊಡಲು ಕಾರಣೀಕರ್ತರಾಗಿದ್ದಾರೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪ್ರಭಾ ಶುಗರ್ಸ ಅಧ್ಯಕ್ಷ ಅಶೋಕ ಪಾಟೀಲ, ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಮಲ್ಲಿಕಾರ್ಜುನ ಕಬ್ಬೂರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಮೂಡಲಗಿ ತಾಲೂಕು ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ, ಘಟಪ್ರಭಾ ಜೆಜಿಕೋ ನಿರ್ದೇಶಕ ಶಿವನಗೌಡ ಪಾಟೀಲ, ಬಸವಪ್ರಭು ನಿಡಗುಂದಿ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಸುಭಾಸ ಕುರಬೇಟ, ಮಹಾದೇವ ತಾಂಬಡಿ, ರವೀಂದ್ರ ಪರುಶೆಟ್ಟಿ, ಹಣಮಂತ ತೇರದಾಳ, ಲಕ್ಷ್ಮಣ ನೀಲನ್ನವರ, ಭೀಮಪ್ಪ ಕಲ್ಲೋಳ್ಳಿ ಸೇರಿದಂತೆ ಕ್ಷೇತ್ರದ ಹಲವು ಸಮಾಜ ಮುಖಂಡರು ಉಪಸ್ಥಿತರಿದ್ದರು.
ಮುಖಂಡ ರಾಜು ಬೈರುಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಪ್ಪ ಕೇವಟಿ ನಿರೂಪಿಸಿದರು. ಅಜೀತ ಪಾಟೀಲ ವಂದಿಸಿದರು.


Spread the love

About Ad9 News

Check Also

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love *1.55 ಕೋ.ರೂ ವೆಚ್ಚದ ದಂಡಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಬಹು ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ* …

Leave a Reply

Your email address will not be published. Required fields are marked *