ಮೂಡಲಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಭಾರತದ ಭಾವಿ ಪ್ರಜೆಗಳಾದ ನೀವುಗಳು ಭವ್ಯ ಭಾರತದ ಕನಸನ್ನು ಕಟ್ಟಿ ಸಂವಿಧಾನದ ಚೌಕಟ್ಟಿನಲ್ಲಿ ನಿಮ್ಮದೇ ಆದಂತಹ ಸಾಧನೆಯನ್ನು ಮಾಡಿ ಸಂವಿಧಾನದಲ್ಲಿ ಅಳವಡಿಸಿರುವಂತಹ ಭ್ರಾತೃತ್ವ ಸಹೋದರತೆ ಸಮಾನತೆ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ಸದೃಢ ಭಾರತವನ್ನು ನಿರ್ಮಿಸುವುದರ ಜೊತೆಗೆ ದೃಢ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದು ಎಸ್.ಎಸ್.ಆರ್ ಪ್ರೌಢ ಶಾಲೆಯ ಉಪರಾಚಾರ್ಯ ಬಿ.ಕೆ ಕಾಡಪ್ಪಗೋಳ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಮಂಗಳವಾರದಂದು ಜರುಗಿದ ಭಾರತೀಯ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. .
ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿ ಸಂಘಟಟನೆಯ ಅಧ್ಯಕ್ಷ ಚಂದ್ರು.ಎಸ್.ಮೋಟೆಪ್ಪಗೋಳ ಮಾತನಾಡಿ, ಭಾರತದ ಕಾನೂನಿನ ಚೌಕಟ್ಟು ಎಂದೇ ಕರೆಯಲ್ಪಡುವ ಭಾರತೀಯ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯು ತನ್ನದೇ ಆಗಿರುವ ಸಂವಿಧಾನ ಕರಡು ಸಮಿತಿಯನ್ನು ರಚನೆ ಮಾಡಿ ಈ ಸಮಿತಿಗೆ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಇವರ ಮೂಲಕ ಎರಡು ವರ್ಷ 11 ತಿಂಗಳು 18 ದಿವಸ ಗಳ ಕಾಲ ಸಮಯವನ್ನು ತೆಗೆದುಕೊಂಡು,ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಎಂದು ಖ್ಯಾತವಾಗಿರುವ ಭಾರತೀಯ ಸಂವಿಧಾನವನ್ನ ರಚನೆ ಮಾಡಿ, 1949 ನವೆಂಬರ್ 26ರಂದು ಅಂಗೀಕರಿಸಲಾಯಿತು. ಈ ಅಂಗೀಕಾರವಾದ ದಿನವನ್ನು ‘ಭಾರತೀಯ ಸಂವಿಧಾನ ದಿನ ‘ ಎಂದು ಆಚರಿಸಲಾಗುತ್ತಿದೆ. ಕೊನೆಗೆ 1950 ಜನವರಿ 26ರಂದು ಜಾರಿಗೆ ಬಂದಿತು. ನಮ್ಮ ಸುರಕ್ಷಿತ ಜೀವನದ ಪವಿತ್ರ ಗ್ರಂಥ ಭಾರತೀಯ ಸಂವಿಧಾನದ ಎಂದು ಹೇಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದು ಸವಿವರವಾಗಿ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಎಸ್.ಕುರಣೆ, ಎಸ್ ಆರ್.ಗಲಗಲಿ, ರಮೇಶ. ಎಸ್.ಬಿರಾದಾರ, ಹೇಮಾ ಢವಳೇಶ್ವರ, ರವಿ ಹೊಸಟ್ಟಿ, ವೀಣಾ ಸರಿಕರ, ಕವಿತಾ ಬಾರಡ್ಡಿ, ಜ್ಯೋತಿ ಬಂಡಿವಡ್ಡರ ಮತ್ತಿತರರು ಉಪಸ್ಥಿತರಿದ್ದರು.