Breaking News

ಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ.

Spread the love


ಘಟಪ್ರಭಾ: ನಿಮ್ಮ ಸಮಾಜವನ್ನು ಪ್ರೀತಿಸುವುದರ ಜೊತೆಗೆ ಮತ್ತೊಂದು ಸಮಾಜದವರ ಬಗ್ಗೆ ಗೌರವ, ಆದರ ಇಟ್ಟುಕೊಳ್ಳಬೇಕು. ಸಮಾಜದಲ್ಲಿ ಪ್ರತಿ ಜಾತಿಗಳು ಸಹೋದರತ್ವ ಮನೋಭಾವನೆಯಿಂದ ನಡೆದುಕೊಂಡಾಗ ಮಾತ್ರ ಎಲ್ಲ ಸಮುದಾಯಗಳು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಶನಿವಾರದಂದು ಸಮೀಪದ ಅರಭಾವಿ (ಗುಡ್ಡದವಾರಿ) ಪಟ್ಟಣದಲ್ಲಿ ಜರುಗಿದ ದಲಿತ ಬೃಹತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಸಿ/ಎಸ್.ಟಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧರಿರುವುದಾಗಿ ಹೇಳಿದರು.
ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು. ನೇರವಾಗಿ ಫಲಾನುಭವಿಗಳಿಗೆ ಯೋಜನೆಗಳು ಮುಟ್ಟಬೇಕು. ಅದರಲ್ಲೂ ಬಡಕುಟುಂಬಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ದಿಗೆ ನಮ್ಮ ಸರ್ಕಾರ ಸದಾ ಸಿದ್ದವಿದೆ. ಈ ದಿಸೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.


2004ರಿಂದ ಅರಭಾವಿ ಭಾಗದ ಶಾಸಕನಾಗಿ ಅಯ್ಕೆಯಾಗುತ್ತಾ ಬಂದಿರುವ ನನಗೆ ಜನರ ಆಶೀರ್ವಾದದಿಂದ ನಮ್ಮ ಶಕ್ತಿ ವೃದ್ದಿಯಾಗುತ್ತಿದೆ. ಅದು ಸಾಮಾಜಿಕವಾಗಲಿ ಅಥವಾ ರಾಜಕೀಯವಾಗಲಿ ಎಲ್ಲ ಹಂತಗಳಲ್ಲೂ ಜನರು ನಮಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಕೆಲವೇ ದಿನಗಳಲ್ಲಿ ಬರಲಿರುವ ಚುನಾವಣೆಯಲ್ಲಿ ಈ ಬಾರಿಯೂ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವಾದ ಮಾಡಬೇಕು. ನಿಮ್ಮ ಮನೆಯ ಅಕ್ಕ-ಪಕ್ಕದ ಕುಟುಂಬದವರಿಗೂ ಬಿಜೆಪಿ ಮತ ನೀಡುವಂತೆ ಪ್ರೇರಣೆ ನೀಡಬೇಕು. ಬೇರೆ ಪಕ್ಷಗಳಿಗೆ ಮತ ಹೋಗದಂತೆ ನಮ್ಮ ಕಾರ್ಯಕರ್ತರು ಮತದಾರರನ್ನು ಮನವೊಲಿಸುವ ಕೆಲಸ ಮಾಡುವಂತೆ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಸ್.ಸಿ/ಎಸ್.ಟಿ ಸಮುದಾಯದ ಒಳ ಪಂಗಡಗಳಿಗೆ ಅನುಕೂಲವಾಗಲು ಸಾಕಷ್ಟು ಕೆಲಸ ಮಾಡಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಈ ಸಮುದಾಯಗಳ ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದಾರೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಈ ಸಮುದಾಯಗಳಿಗೆ ಆಶಾಕಿರಣರಾಗಿದ್ದಾರೆ. ಮುಂದೆಯೂ ಸಹ ರಾಜ್ಯದಲ್ಲಿ ನಮ್ಮ ಪಕ್ಷವೇ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದ್ದು ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಶರವೇಗದಲ್ಲಿ ನಡೆಯಲಿವೆ ಎಂದು ತಿಳಿಸಿದರು.


ಡಾ|| ಅಂಬೇಡ್ಕರ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಅವರು ಬೋಧಿಸಿರುವ ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಸಮಾಜ ಪ್ರಗತಿಯಾಗಬೇಕಾದರೇ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ಇಡೀ ಸಮಾಜ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಸತ್ತೆಪ್ಪ ಕರವಾಡೆ, ರಮೇಶ ಮಾದರ, ಬಸವರಾಜ ಕಾಡಾಪೂರ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಲಕ್ಷ್ಮಣ ತೆಳಗಡೆ, ಮನೋಹರ ಅಜ್ಜನಕಟ್ಟಿ, ಪ್ರಭಾ ಶುಗರ್ಸ ನಿರ್ದೇಶಕ ಎಮ್.ಆರ್.ಭೋವಿ, ಕೌಜಲಗಿ ಜಿ.ಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ಮೂಡಲಗಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಹಿರಿಯ ಸದಸ್ಯ ರವೀಂದ್ರ ಸಣ್ಣಕ್ಕಿ, ತಾ.ಪಂ ಮಾಜಿ ಅಧ್ಯಕ್ಷ ಶಂಕರ ಬೆಳಗಲಿ, ಪ್ರಭು ಬಂಗೆನ್ನವರ, ನಿವೃತ್ತ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ, ಅಶೋಕ ಭಜಂತ್ರಿ ಸೇರಿದಂತೆ ಎಸ್.ಸಿ/ಎಸ್.ಟಿ ಸಮುದಾಯದ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಯಮನಪ್ಪ ಕರಬನ್ನವರ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮತ್ತಷ್ಟು ಶಕ್ತಿಯನ್ನು ನೀಡಲು ಈ ದಲಿತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಶೋಷಿತರು, ಬಡವರು, ನೊಂದವರ ಕಣ್ಣಿರನ್ನು ಒರೆಸುತ್ತಿರುವ ಕ್ಷೇತ್ರದ ಅಭಿವೃದ್ದಿಗೆ ಪಣ ತೊಟ್ಟು ಜನಸೇವಕರಾಗಿ ಕೆಲಸ ಮಾಡುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಪದೇ-ಪದೇ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲಾ ನಮ್ಮ ವಿರೋಧವಿದೆ. ಜನರ ಪ್ರೀತಿ ಆಶೀರ್ವಾದ ಇರುವ ತನಕ ಈ ಭಾಗದ ಶಾಸಕರಾಗಿರಿ, ದೇವರ ಅನುಗೃಹ ಸದಾ ನಿಮ್ಮೆಲಿರಲಿ, ರಾಜಕೀಯ ನಿವೃತ್ತಿಯ ಮಾತುಗಳನ್ನು ಯಾವ ಕಾಲಕ್ಕೂ ಆಡಬೇಡಿ ನಾವು ನಿಮ್ಮೊಂದಿಗೆ ಸದಾ ಇದ್ದೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ದಲಿತ ಸಮಾಜ ಬಾಂಧವರು ಅರಭಾವಿ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ನಂತರ ಮುಖ್ಯ ರಸ್ತೆಗಳಲ್ಲಿ ರೋಡ ಶೋ ಜರುಗಿತು. ಎ.ಜಿ.ಕೋಳಿ ಕಾರ್ಯಕ್ರಮ ನಿರೂಪಿಸಿದರು.


Spread the love

About Ad9 News

Check Also

ಮೂಡಲಗಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

Spread the love ಮೂಡಲಗಿ : ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ, ದೇಶದ ಪ್ರತಿಯೊಬ್ಬ ನಾಗರೀಕನಿಗೆ ಪವಿತ್ರ …

Leave a Reply

Your email address will not be published. Required fields are marked *