Breaking News

ಹೈನುಗಾರಿಕೆ ದೃಷ್ಟಿಯಿಂದ ರೈತರಿಗೆ 50 ಸಾವಿರ ರೂ.ವರೆಗೆ ಬಡ್ಡಿ ರಹಿತ ಸಾಲ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಬೆಳಗಾವಿಯಲ್ಲಿ ಜರುಗಿದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳಿಗೆ ಒಟ್ಟು 70 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ*

*ಬೆಳಗಾವಿ* : ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಗಳನ್ನು ಹೆಚ್ಚು ಮಾಡುವ ಉದ್ಧೇಶದಿಂದ ಹೈನುಗಾರಿಕೆ ಮಾಡುವ ರೈತರಿಗೆ 50 ಸಾವಿರ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡಲು ಜಿಲ್ಲಾ ಹಾಲು ಒಕ್ಕೂಟದಿಂದ ನಿರ್ಧರಿಸಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.


ಮಂಗಳವಾರದಂದು ನಗರದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಜಿಲ್ಲೆಯ ಎಲ್ಲ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒಟ್ಟು 70 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲದ ಚೆಕ್‍ಗಳನ್ನು ವಿತರಿಸಿ ಮಾತನಾಡಿದರು.
ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡು ಜಿಲ್ಲೆಯಲ್ಲಿ ಸುಮಾರು 7 ಸಾವಿರ ಹಸುಗಳು ಮೃತಪಟ್ಟಿವೆ. ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಜಾನುವಾರುಗಳಿಗೆ ಚರ್ಮ ಗಂಟು ರೋಗ ಬಂದಾಗ ಹಸುಗಳನ್ನು ಮಾರಾಟ ಮಾಡಿದ ರೈತರು ಮತ್ತೇ ಹೈನುಗಾರಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರತಿ ಸೊಸಾಯಿಟಿಗೆ 5 ಲಕ್ಷ ರೂ.ಗಳನ್ನು ಜಿಲ್ಲಾ ಹಾಲು ಒಕ್ಕೂಟದಿಂದ ನೀಡಲಾಗುತ್ತಿದೆ. ಸೊಸಾಯಿಟಿಗೆ ಹೆಚ್ಚು ಹಾಲು ಕಳುಹಿಸುತ್ತಿದ್ದ ರೈತರು ಹಸು ಖರೀದಿಸಲು ಮುಂದೆ ಬಂದರೆ ಸೊಸಾಯಿಟಿಯಿಂದ ಹಸು ಖರೀದಿಸಲು 50 ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ಇದರಿಂದ ಸೊಸಾಯಿಟಿಗೆ ಆರ್ಥಿಕವಾಗಿ ಮುಂದೆ ಬರಲು ಅನುಕೂಲವಾಗುತ್ತದೆ. ರೈತರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಅವರು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಕಡೆಗಳಲ್ಲಿ ಕೆಮಿಕಲ್ ಮಿಶ್ರಿತ ಹಾಲು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅಂತಹ ಘಟಕಗಳ ಮೇಲೆ ದಾಳಿ ಮಾಡಬೇಕು. ಇಲ್ಲದಿದ್ದಲ್ಲಿ ಮಕ್ಕಳ ಹಾಗೂ ಸಾರ್ವಜನಿಕ ಆರೋಗ್ಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.


ಕೆಎಂಎಫ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿಯೇ ಮೇಘಾ ಹಾಲಿನ ಡೇರಿ ಸ್ಥಾಪನೆ ಮಾಡಬೇಕೆಂದು ಪ್ರಸ್ತಾವಣೆ ಸಲ್ಲಿಸಿದ್ದೆ. ಆದರೆ ಅದಕ್ಕೆ ಜಾಗೆಯ ಕೊರತೆ ಇದೆ. ಜಾಗೆ ಸಿಕ್ಕರೆ ಸರ್ಕಾರಕ್ಕೆ ಪ್ರಸ್ತಾವಣೆ ಕಳುಹಿಸಿ ಬೆಳಗಾವಿಯಲ್ಲಿ ಮೇಘಾ ಡೇರಿ ಪ್ರಾರಂಭಿಸಲು ಶ್ರಮಿಸುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
*ಲೋಕಸಭೆಗೆ ಸ್ಪರ್ಧಿಸಲ್ಲ* : ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು ಬಿಜೆಪಿ ಟಿಕೇಟ್ ಆಕಾಂಕ್ಷಿಯೂ ಆಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದರು.
ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಮೇಲೆ ನಡೆಯುತ್ತದೆ. ಪಕ್ಷ ಯಾರಿಗೆ ಟಿಕೇಟ್ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಬಣಗಳಿಂದಾಗಿ ಮತದಾರರು ನಮ್ಮ ವಿರುದ್ಧ ತೀರ್ಪು ನೀಡಿದ್ದಾರೆ. ಈಗ ಜಿಲ್ಲೆಯಲ್ಲಿ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ. ನಾವೆಲ್ಲರೂ ಒಂದಾಗಿಯೇ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.
ಪಕ್ಷದ ಹೈಕಮಾಂಡ ಯಾರಿಗೆ ನಾಯಕತ್ವ ವಹಿಸುತ್ತದೆಯೋ ಅವರ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೇಸ್‍ಗೆ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೇಸ್ ಶಾಸಕರ ಅಸಮಾಧಾನದ ಪತ್ರ ಬರೆದವರಿಗೆ ಹೆದರಿಸಲು ಆಪರೇಷನ್ ಎನ್ನುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೇಸ್‍ಗೆ ಯಾವ ಶಾಸಕರು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರನ್ನು ಕರೆತರುತ್ತೇವೆ ಎಂದು ಕಾಂಗ್ರೇಸ್ ಶಾಸಕರನ್ನೇ ಹೆದರಿಸಲಾಗುತ್ತಿದೆ. ಕಳೆದ ಬಾರಿ ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೇ ಆರಂಭವಾಗಿ ಒಂದು ವರ್ಷ ನಂತರ ಸ್ಪೋಟವಾಗಿತ್ತು. ಈಗ ಕಾಂಗ್ರೇಸ್ ಮುಖಂಡರು ಈಗಲೇ ಎಚ್ಚೆತ್ತುಕೊಂಡು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಹೇಳಿಕೆಯಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ನೀಡಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಬೇಕು. ಅವರಿಗೆ ತೊಂದರೆ ಕೊಟ್ಟು ನಾವೇಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
*ಜಿಲ್ಲಾ ವಿಭಜನೆಗೆ ಸಹಮತ :* ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕಿದೆ. ಗೋಕಾಕ, ಚಿಕ್ಕೋಡಿಯನ್ನು ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಈ ಮೊದಲು ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು ಎಂದು ದೊಡ್ಡ ದೊಡ್ಡ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಆದರೆ ಈಗ ಮತ್ತೇ ಜಿಲ್ಲಾ ವಿಭಜನೆ ಕೂಗು ಕೇಳಿ ಬರುತ್ತಿದೆ. ಬೇರೆ ತಾಲೂಕಿನವರು ಜಿಲ್ಲಾ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಅದು ಅವರಿಗೆ ಬಿಟ್ಟದ್ದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಎಂಎಲ್‍ಸಿ ವಿವೇಕರಾವ ಪಾಟೀಲ, ನಿರ್ದೇಶಕರಾದ ಬಾಬು ಕಟ್ಟಿ, ಸೋಮಲಿಂಗಪ್ಪ ಮುಗಳಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಬಸವರಾಜ ಪರವನ್ನವರ, ಅಪ್ಪಾಸಾಬ ಅವತಾಡೆ, ಬಾಬುರಾವ ವಾಘಮೋಡೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಸವಿತಾ ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಪ್ಪ ಎಂ. ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …

Leave a Reply

Your email address will not be published. Required fields are marked *