Breaking News

ಮೂಡಲಗಿ ಶೈಕ್ಷಣಿಕ ವಲಯದ ಹೆಮ್ಮೆಯ ಸಾಧನೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the love

*ಮೂಡಲಗಿ* : ಮೂಡಲಗಿ ವಲಯವು ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿನ ಹಾಜರಾತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಮಟ್ಟದ ಫಲಿತಾಂಶದ ಜೊತೆಗೆ ಉತ್ತಮ ಗುಣಮಟ್ಟದ ಕಲಿಕೆಯನ್ನು ಅರಿತು ದೇಶದಲ್ಲಿಯೇ ಉತ್ತಮ ಸಾಧನೆ ಮಾಡಿ ಹೆಮ್ಮರವಾಗಿ ಬೆಳೆಯುತ್ತಿದೆ. ಇದಕ್ಕೆ ವಲಯದಲ್ಲಿರುವ ಎಲ್ಲ ಶಿಕ್ಷಕ ಸಮುದಾಯದ ಪರಿಶ್ರಮವೇ ಕಾರಣವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಮಂಗಳವಾರದಂದು ಮೂಡಲಗಿ ತಾಲೂಕಿನ ವಡೇರಹಟ್ಟಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ
ಮಹಾವಿದ್ಯಾಲಯ/ಅರಭಾವಿ ಬಸವೇಶ್ವರ ಸಭಾ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೂಡಲಗಿ ವಲಯದ ಶೈಕ್ಷಣಿಕ ಸುಧಾರಣಾ ಕಾರ್ಯಕ್ರಮಗಳು ದೆಹಲಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದು ಉತ್ತಮ ನಿದರ್ಶನವೆಂದು ಹೇಳಿದರು.


ಪ್ರತಿವರ್ಷವೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತ ಬರುತ್ತಿದ್ದೇವೆ. ನನ್ನ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದೇನೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಧ್ಯ ಪೈಪೋಟಿಗಳು ನಡೆಯುತ್ತಿದ್ದರೂ ಅವುಗಳನ್ನು ದಿಟ್ಟವಾಗಿ ಎದುರಿಸಿ ಇಂದು ಮೂಡಲಗಿ ಶೈಕ್ಷಣಿಕ ವಲಯವು ಸರ್ಕಾರಿ ಹಾಗೂ ವಸತಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ಚೆಲ್ಲುವಲ್ಲಿ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಉತ್ತಮ ಸಂಘಟನಾ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲ ಶಿಕ್ಷಕ ಸಮುದಾಯವನ್ನು ಸಂಘಟನಾತ್ಮಕವಾಗಿ ಮುನ್ನಡೆಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮತ್ತು ಅವರ ತಂಡವನ್ನು ಮುಕ್ತ ಕಂಠದಿಂದ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ನಮ್ಮ ವಲಯವು ಧಾರವಾಡ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಹಾಜರಾತಿಯಲ್ಲಿ ೩ನೇ ಸ್ಥಾನ ಪಡೆದಿದೆ. ಖಾಸಗಿ ಶಾಲೆಗಳ ಪೈಪೋಟಿ ಮಧ್ಯೆಯೂ ನಮ್ಮ ವಿದ್ಯಾರ್ಥಿಗಳು ಅಪ್ರತಿಮ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದೆಂಬುದನ್ನು ವಿದ್ಯಾರ್ಥಿಗಳು ಸಾಬೀತುಪಡಿಸುತ್ತಲಿದ್ದಾರೆ. ಇಂತಹ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪಡೆದಿರುವುದು ನಮ್ಮ ವಲಯದ ಪುಣ್ಯ ಎಂದು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.
ನಾನು ಶಾಸಕನಾದ ನಂತರ ೨೫ ಸರ್ಕಾರಿ ಪ್ರಾಥಮಿಕ ಶಾಲೆಗಳು, ೭ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳು, ೨೩ ಸರ್ಕಾರಿ ಪ್ರೌಢ ಶಾಲೆಗಳು, ೧೨ ಸರ್ಕಾರಿ ವಸತಿ ಶಾಲೆಗಳು, ೧ ಸರ್ಕಾರಿ ಪದವಿ ಪೂರ್ವ ಕಾಲೇಜು, ೧ ಸರ್ಕಾರಿ ಪದವಿ ಕಾಲೇಜು, ೨೭ ಸರ್ಕಾರಿ ವಸತಿ ನಿಲಯಗಳು, ೫ ವಿಶೇಷ ಶಾಲಾ ಕಾಲೇಜುಗಳನ್ನು ವಿಶೇಷ ಆಸಕ್ತಿಯೊಂದಿಗೆ ಆರಂಭಿಸಲಾಗಿದೆ. ಜೊತೆಗೆ ಕಳೆದ ೪ ವರ್ಷಗಳಲ್ಲಿ ೩೧೦ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇನೆ. ಪ್ರತಿ ವರ್ಷ ವಿವಿಧ ವಸತಿ ಶಾಲೆಗಳಿಗೆ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ೨೨ ವರ್ಷಗಳಿಂದ ಮೂಡಲಗಿ ವಲಯವು ಸತತ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ೩ ಬಾರಿ ಪ್ರಥಮ ಸ್ಥಾನ ಗಳಿಸಿ ಕೀರ್ತಿ ತಂದಿರುವುದು ಹೆಮ್ಮೆಯಾಗಿದೆ. ಖಾನಟ್ಟಿ, ಬೆಟಗೇರಿ, ಕುಲಗೋಡ, ಮೂಡಲಗಿ ಹೊಸ ಪಿಯು ಕಾಲೇಜುಗಳ ಮಂಜೂರಾಗಿದ್ದು, ಆರ್ಥಿಕ ಇಲಾಖೆಯಿಂದ ಹುದ್ದೆಗಳ ಅನುಮೋದನೆ ಸಿಗಬೇಕಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆರಂಭದಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚಣೆ ಮಾಡಿದರು. ನಂತರ ಸೇವೆಯಿಂದ ನಿವೃತ್ತಗೊಂಡ ಶಿಕ್ಷಕರು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಪರಮೇಶ್ವರ ಹೊಸಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಟಿ. ಗಿರಡ್ಡಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ತಾಪಂ ಇಒ ಎಫ್.ಜಿ. ಚಿನ್ನನ್ನವರ, ಸಿಡಿಪಿಓ ವಾಯ್.ಕೆ. ಗದಾಡಿ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಎ.ಬಿ. ಮಲಬನ್ನವರ, ಸಿಪಿಐ ಶ್ರೀಶೈಲ ಬ್ಯಾಕೋಡ, ವಡೇರಹಟ್ಟಿ ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಮಳ್ಳಿವಡೇರ, ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ವಡೇರಹಟ್ಟಿ ಸಂ.ಪ.ಪೂ ಕಾಲೇಜಿನ ಪ್ರಾಚಾರ್ಯ ಎಸ್.ಆಯ್. ಭಾಗೋಜಿ, ಶಿಕ್ಷಕರ ಸಂಘದ ಪ್ರತಿನಿಧಿಗಳು, ವಿವಿಧ ಪ್ರತಿಷ್ಠಾನಗಳ ಮುಖ್ಯಸ್ಥರು, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *