Breaking News

ಮಹಾನ್ ಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬೇಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಮೂಡಲಗಿ* : ಸಂತ ಶ್ರೇಷ್ಠ ಕನಕದಾಸ ಮತ್ತು ಶೂರ ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರನ್ನು ಪಡೆದಿರುವುದು ಹಾಲುಮತ ಸಮಾಜದ ಸೌಭಾಗ್ಯವಾಗಿದೆ. ಆದರೂ ಇಂತಹ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮಾಜಗಳು ಇವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಮಂಗಳವಾರದಂದು ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಹಾಗೂ ವಿಶ್ವಜ್ಯೋತಿ ಕನಕದಾಸರ ನೂರೆಂಟು ನಾಮಾವಳಿಯ ಮಹಾಪೂಜೆಯ ಮಂಗಲೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎಲ್ಲ ಮಹಾನ್ ಪುರುಷರನ್ನು ಸ್ಮರಿಸಬೇಕಾದ ಅವಶ್ಯವಿದೆ ಎಂದು ಹೇಳಿದರು.
ನಮ್ಮ ಸಮಾಜಗಳನ್ನು ಪ್ರೀತಿಸುವುದರ ಜೊತೆಗೆ ಅನ್ಯ ಸಮಾಜಗಳನ್ನು ಗೌರವದಿಂದ ಕಾಣಬೇಕು. ಅಂದಾಗ ಮಾತ್ರ ನಮ್ಮಲ್ಲಿ ಸೌಹಾರ್ದಯುತ ಭಾವನೆಗಳು ಮೂಡಲು ಸಾಧ್ಯವಾಗುತ್ತದೆ. ದೇಶದಲ್ಲಿಂದು ನಾನಾ ಧರ್ಮಗಳು, ಜಾತಿಗಳು ಇದ್ದರೂ ಸಹ ನಾವೆಲ್ಲರೂ ಒಂದಾಗಿ, ಒಗ್ಗಟ್ಟಾಗಿ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿದ್ದೇವೆ ಎಂದು ತಿಳಿಸಿದರು.
ರಾಜಾಪೂರ ಮಣ್ಣಿನ ಗುಣವೇ ದೊಡ್ಡ ಶಕ್ತಿಯಾಗಿದೆ. ಕಳೆದ ಚುನಾವಣೆಯಲ್ಲಿ ನಾನು ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಯ್ಕೆಯಾಗುತ್ತೇನೆ ಎಂದು ರಾಜಾಪೂರದಲ್ಲಿಯೇ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದೆ. ಅದರಂತೆ ಈ ಭಾಗವೂ ಸೇರಿದಂತೆ ಇಡೀ ಅರಭಾವಿ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ನಂಬಿಕೆ ವಿಶ್ವಾಸಕ್ಕೆ 71 ಸಾವಿರ ಮತಗಳ ಮುನ್ನಡೆ ನೀಡಿ ಆಶೀರ್ವಾದ ಮಾಡಿದ್ದಾರೆ. ರಾಜಾಪೂರ ಗ್ರಾಮದ ಮುಖಂಡರು ಒಗ್ಗಟ್ಟಾಗಿ ಗ್ರಾಮಾಭಿವೃದ್ಧಿಗೆ ದುಡಿಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಹಿಡಕಲ್ ಜಲಾಶಯದಲ್ಲಿ ಈಗ 43 ಟಿಎಂಸಿ ನೀರು ಸಂಗ್ರಹವಿದ್ದು, ಪೂರ್ತಿ ಭರ್ತಿಯಾಗಲಿಕ್ಕೆ 8 ಟಿಎಂಸಿ ನೀರು ಬೇಕು. ಆದ್ದರಿಂದ ಪ್ರತಿಯೊಬ್ಬರೂ ದೇವರಿಗೆ ಮೊರೆ ಹೋಗಿ ಮಳೆ ಆಗುವಂತೆ ಬೇಡಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಸಾನಿಧ್ಯವನ್ನು ಹುಣಶ್ಯಾಳ ಪಿಜಿಯ ನಿಜಗುಣ ದೇವರು, ಜೋಕಾನಟ್ಟಿಯ ಬಿಳಿಯಾನಸಿದ್ಧೇಶ್ವರ ಸ್ವಾಮಿಗಳು, ಕಲ್ಲೋಳಿಯ ಅಕ್ಕಮಹಾದೇವಿ ಮಾತೆ ವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಕಪರಟ್ಟಿಯ ಬಸವರಾಜ ಸ್ವಾಮಿಗಳು ವಹಿಸಿ ಅಧಿಕ ಮಾಸದ ಪ್ರಯುಕ್ತ ಕನಕದಾಸರ ಮಹಾಪೂಜೆಯನ್ನು ಪ್ರತಿ ಹಳ್ಳಿಗಳಲ್ಲಿ ಆಯೋಜನೆ ಮಾಡಲಾಗಿದೆ. ಇದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಮಗೆ ತನು ಮನ ಧನದಿಂದ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಸಹ ನಮಗೆ ವಿಶೇಷವಾದ ಪ್ರೀತಿಯನ್ನು ತೋರಿದ್ದಾರೆ ಎಂದು ತಿಳಿಸಿದರು.
ಗೋಕಾಕ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಬೆಂಗಳೂರು ಎಸ್‍ಎಲ್‍ಡಿಪಿ ನಿರ್ದೇಶಕ ರಾಜು ಬೈರುಗೋಳ, ರಾಮಚಂದ್ರ ಪಾಟೀಲ, ಶಿವು ಕಮತಿ, ಬಸವರಾಜ ಪಂಡ್ರೊಳ್ಳಿ, ಭೈರಪ್ಪ ಯಕ್ಕುಂಡಿ, ಪ್ರಭಾಶುಗರ ನಿರ್ದೇಶಕ ಲಕ್ಷ್ಮಣ ಗಣಪ್ಪಗೋಳ, ರಾಜು ಪವಾರ, ವಾಶಪ್ಪ ಪಂಡ್ರೊಳ್ಳಿ, ಸೋಮಲಿಂಗ ವಡೇರ, ಲಕ್ಷ್ಮಣ ಮಸಗುಪ್ಪಿ, ವಿನಾಯಕ ಕಟ್ಟಿಕಾರ, ಬಿಇಓ ಅಜೀತ ಮನ್ನಿಕೇರಿ, ಸಿಡಿಪಿಓ ಯಲ್ಲಪ್ಪ ಗದಾಡಿ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ರಾಜಾಪೂರ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಸತ್ಕರಿಸಲಾಯಿತು.


Spread the love

About Ad9 News

Check Also

ಲೋಕಾಯುಕ್ತ ಸಿಪಿಐ ಹಾಲಪ್ಪ ಬಾಲದಂಡಿಗೆ ಸತ್ಕಾರ

Spread the love  ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕಾರ್ಯ ನಿರ್ವಹಿಸಿ ಚುನಾವಣಾ ನಿಮಿತ್ಯ ಬಾಗಲಕೋಟೆ ಜಿಲ್ಲೆಯ ತೇರದಾಳ …

Leave a Reply

Your email address will not be published. Required fields are marked *